ಮಹಿಳಾ ಸಬಲೀಕರಣದ ನಡುವೆಯೂ ಲಿಂಗ ತಾರತಮ್ಯ ಜೀವಂತವಾಗಿ ಉಳಿದಿದೆ- ಡಾ ಜ್ಯೋತಿ ಅರವಿಂದ ಪಟೇಲ್
ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣಕ್ಕೆ ಎಷ್ಟೇ ಪ್ರಾಧಾನ್ಯತೆ ಕೊಟ್ಟರೂ ವಿಶ್ವದಾದ್ಯಂತ ತಾರತಮ್ಯತೆಗಳು ಮುಂದುವರೆದಿವೆ ಎಂದು ನಗರದ ಖ್ಯಾತ ಪ್ರಸೂತಿ ತಜ್ಞರಾದ ಡಾ ಜ್ಯೋತಿ ಅರವಿಂದ ಪಟೇಲ್ ಅಸಮಧಾನ ವ್ಯಕ್ತ ಪಡಿಸಿದರು. ವಿಶ್ವ ವಿಜ್ಞಾನ ದಿನಾಚರಣೆ ಅಂಗವಾಗಿ ವೀರಶೈವ ಮಹಾವಿದ್ಯಾಲಯದ ವಿಜ್ಞಾನ ಸಂಘ ‘ವಿಜ್ಞಾನದಲ್ಲಿ ಮಹಿಳೆ’ ಎಂಬ ಶೀರ್ಷಿಕೆ ಅಡಿ ಏರ್ಪಡಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಗತ್ತಿನ ಒಟ್ಟು ವಿಜ್ಞಾನಿಗಳಲ್ಲಿ ಶೇಕಡಾ 30% ರಷ್ಟು ಮಾತ್ರ ಮಹಿಳೆಯರು ಇರುವುದಕ್ಕೆ ನಮ್ಮ ಪೂರ್ವಾಗ್ರಹಪೀಡನೆ ಕಾರಣ ಎಂದರು. ಪುರುಷರಿಗೆ ಸಮಾನವಾದ ಅವಕಾಶಗಳು ಎಲ್ಲ ಕ್ಷೇತ್ರಗಳಲ್ಲಿ ಲಭ್ಯವಿದ್ದರು ಕಾರಣಾಂತರಗಳಿಂದ ಅವುಗಳನ್ನು ಬಳಸಿಕೊಳ್ಳಲು ಮಹಿಳೆಯರು ಮುಕ್ತವಾಗಿ ಮುಂದೆ ಬಾರದೆ ಇರುವುದು ಅವರ ಸಬಲೀಕರಣ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ ಎಂದು ತಿಳಿಸಿದರು. ಮಹಿಳೆಯರು ವ್ಯವಸ್ಥೆಯ ಭಾಗವಾಗಿರುವುದರಿಂದ ಸ್ವಾಭಾವಿಕವಾಗಿ ಸಿಗುವ ಹಕ್ಕುಗಳನ್ನು ಪಡೆದು ಭವಿಷ್ಯವನ್ನು ಭದ್ರ ಬುನಾದಿಯ ಮೇಲೆ ಬೆಳಿಸಿಕೊಳ್ಳಲು ಸೂಚಿಸಿದರು.ಜೀವನದಲ್ಲಿ ಎದುರಾಗುವ ಅಡತಡೆಗಳನ್ನು ಹಿಂದಕ್ಕೆ ತಳ್ಳಿ ದಿಟ್ಟ ಹೆಜ್ಜೆಯನ್ನಿಟ್ಟು ಮುನ್ನುಗ್ಗಿದಾಗ ಸ್ವತಂತ್ರವಾಗಿ ಹಂಗನ್ನು ಹರಿದು ಬೆಳೆಯಲು ಸಾಧ್ಯ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ವಿಜ್ಞಾನ, ವೈದ್ಯಕೀಯ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ವ್ಯಾಸಂಗ ಮಾಡಲು ಆಸಕ್ತಿ ತೋರಬೇಕು ಸಲಹೆ ನೀಡಿದರು. ಪ್ರಾಚರ್ಯ ಡಾ ಜಿ. ರಾಜಶೇಖರ ಸಭೆಯ ಅಧ್ಯಕ್ಷತೆ ವಹಿಸಿದರು. ಶ್ರೀ ಡಬ್ಲ್ಯು.ಶರಣಪ್ಪ, ಡಾ.ಕೆ.ಸಿ.ಸಜ್ಜನ್ ಮತ್ತು ಡಾ.ಜಿ.ಮನೋಹರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಶೆರ್ಲಿ ಜೋನ್ಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಜಿ.ಮಲ್ಲನಗೌಡ ಅಥಿತಿಗಳನ್ನು ಸ್ವಾಗತಿಸಿದರು. ಶ್ರೀ ಶರಣ ಕುಮಾರ ವಂದಿಸಿದರು. ಕು.ರಮ್ಯಶ್ರೀ ಪ್ರಾರ್ಥನೆ ಹೇಳಿದರು.
|
|