ರಕ್ತದಾನದ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು- ಡಾ ಜಿ.ರಾಜಶೇಖರ
ದೇಶದಲ್ಲಿ ದಿನದಿಂದ ದಿನಕ್ಕೆ ರಕ್ತದ ಬೇಡಿಕೆ ಹೆಚ್ಚುತ್ತಿದೆ. ಆದರೆ ದೈಹಿಕ ಕ್ಷಮತೆ ಇರುವ ಅಪಾರ ಸಂಖ್ಯೆಯ ಜನರು ಸ್ವ ಇಚ್ಛೆಯಿಂದ ರಕ್ತದಾನ ಮಾಡಲು ಮುಂದೆ ಬಾರದೆ ಇರುವುದಕ್ಕೆ ಅವರಲ್ಲಿಯ ತಪ್ಪು ತಿಳುವಳಿಕೆಯೇ ಕಾರಣ ಎಂದು ವೀರಶೈವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಜಿ.ರಾಜಶೇಖರ ಅಭಿಮತಪಟ್ಟರು.
ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಮತ್ತು ಯೂಥ್ ರೆಡ್ ಕ್ರಾಸ್ ವಿಂಗ್ ಸಂಯುಕ್ತವಾಗಿ ಏರ್ಪಡಿಸಿದ ರಕ್ತದಾನ ಶಿಬಿರ ಮತ್ತು ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಓರ್ವ ವ್ಯಕ್ತಿ ಮಾಡುವ ರಕ್ತದಾನದಿಂದ ಮೂರು ಜನರ ಪ್ರಾಣ ಉಳಿಸಬಹುದು ಎಂದರು. ಆರೋಗ್ಯವಂತ ಸ್ತ್ರೀ ಮತ್ತು ಪುರುಷರು ಪ್ರತಿ ಮೂರು-ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು .ರಕ್ತದಲ್ಲಿ ಕಬ್ಬಿಣದ ಅಂಶ ಅಗತ್ಯಕ್ಕಿಂತ ಹೆಚ್ಚಿದ್ದರೆ ಕೆಲವು ದೈಹಿಕ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಹೃದಯ , ಕರಳು ಮತ್ತು ಪ್ಯಾಂಕ್ರೀಸ್ಗಳಲ್ಲಿ ಶೇಖರಣೆಯಾಗುವ ಕಬ್ಬಿಣದ ವಸ್ತುಗಳು ಕಡಿಮೆಯಾಗಿ ಆ ಅಂಗಾಂಗಗಳಿಗೆ ಯಾವುದೇ ರೋಗ ಬರುವುದಿಲ್ಲ. ರಕ್ತದಾನ ಮನುಷ್ಯನಲ್ಲಿ ಮಾನಸಿಕ ಒತ್ತಡ ಕಡಿಮೆಮಾಡಿ ಹೃದಯ ಕಾಯಿಲೆ ಬಾರದಂತೆ ತಡೆಯುತ್ತದೆ ಎಂದರು .ಯೌವ್ವನ ಮತ್ತು ವಯಸ್ಕಾವಧಿಯಲ್ಲಿರುವ ಪ್ರತಿಯೊಬ್ಬರು ಸ್ವ ಇಚ್ಛೆಯಿಂದ ರಕ್ತದಾನ ಮಾಡಿದರೇ ರಕ್ತದ ಬೇಡಿಕೆಯನ್ನು ಸರಿದುಗಿಸಬಹುದು ಎಂದು ತಿಳಿಸಿದರು.ಸಮಾಲೋಚಕರಾದ ಶ್ರೀ ಗಿರೀಶ್ ಏಡ್ಸ್ ಕುರಿತು ವಿಶೇಷ ಉಪನ್ಯಾಸ ನೀಡಿದರು . ಒಟ್ಟು 75 ವಿದ್ಯಾರ್ಥಿಗಳು ರಕ್ತದಾನ ಮಾಡಿ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿದರು .ಶ್ರೀ ಅಶೋಕ ಓಂಕಾರ ಮತ್ತು ಶ್ರೀ ಶರಣ ಕುಮಾರ ಕಾರ್ಯಕ್ರಮದ ಉಸ್ತುವಾರಿ ವಹಿಸಿದರು.