ವೈ ಮಹಾಬಲೇಶ್ವರಪ್ಪ ಸ್ಥಾಪಿಸಿದ ವೀರಶೈವ ಮಹಾವಿದ್ಯಾಲಯದಿಂದ ಬಳ್ಳಾರಿಯ
ವಾತಾವರಣ ಬದಲಾಯಿತು – ಡಾ.ಜಿ.ರಾಜಶೇಖರ
ವಿದ್ಯಾಪೋಷಕ, ಕೂಡಗೈ ದಾನಿ ಮತ್ತು ವಿನಯ ಸಂಪನ್ನರಾಗಿದ್ದ ಶ್ರೀ ವೈ ಮಹಾಬಲೇಶ್ವರಪ್ಪನವರ ಕೃರ್ತತ್ವ ಶಕ್ತಿಯಿಂದ ಪ್ರಾರಂಭವಾದ ವೀರಶೈವ ಮಹಾವಿದ್ಯಾಲಯ ಸ್ವಾತಂತ್ರ ಪೂರ್ವದ ದಿನಗಳಿಂದಲೇ ಬಳ್ಳಾರಿ ಜಿಲ್ಲೆಯ ಜನರ ಜೀವನ ಮಟ್ಟ ಉತ್ತಮ ಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ವೀರಶೈವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಜಿ.ರಾಜಶೇಖರ ನುಡಿದರು.
ವೀರಶೈವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಅವರ 49ನೇ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶ್ರೀಮಂತ ಕುಟುಂಬದಲ್ಲಿ ಜನಸಿದ ವೈ ಮಹಾಬಲೇಶ್ವರಪ್ಪ ತಮ್ಮ ಬದುಕಿನುದ್ದಕ್ಕೂ ಸರಳ ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ಗುರು ಲಿಂಗ ಜಂಗಮ ಸೇವೆಯಲ್ಲಿ ಸದಾ ನಿರತರಾಗಿರುತ್ತಿದ್ದರು ಎಂದರು. ವೈ ಮಹಾಬಲೇಶ್ವರಪ್ಪನವರ ಬದಕು ಮತ್ತು ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿದ ಶ್ರೀ ಸಿದ್ದರಾಮ ಜಿ ಮುಳಜೆ ಮಹಾಬಲೇಶ್ವರಪ್ಪನವರು ಭಕ್ತಿ ಮತ್ತು ನಿಸ್ವಾರ್ಥದಿಂದ ಮಾಡಿದ ಜನ ಸೇವೆಯಿಂದ ಕರ್ನಾಟಕ ಅಲ್ಲದೆ ನೆರೆಯ ಆಂದ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲೂ ಚಿರಪರಿಚಿತರಾಗಿದ್ದರು ಎಂದು ಹೇಳಿದರು. ಕ್ಷಾಮ ಪೀಡಿತ ಬಳ್ಳಾರಿ ಭಾಗದಲ್ಲಿ ಸಾಹಿತ್ಯ, ಸಂಗೀತ, ನೃತ್ಯ ಮತ್ತು ನಾಟಕಗಳನ್ನು ಪೋಷಿಸಿದ ಮಹಾಪುರುಷರು. ಎಲ್ಲ ಕಲಾವಿದರಿಗೆ ಇವರ ಮನೆ ಆಶ್ರಯ ನೀಡಿತ್ತು. ಶ್ರೀಯುತರು ಶಾಲೆಯಲ್ಲಿ ಕಲಿತಿದ್ದು ಕಡಿಮೆಯಾದರೂ ಜೀವನದ ಅನಭವಗಳಿಂದ ಪಡೆದುದ್ದೆ ಹೆಚ್ಚು. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿ ಅವರು ಸಲ್ಲಿಸಿದ ಮಾದರಿಯ ಸೇವೆ ರಾಜಕಾರಣಿಗಳಿಗೆ ಮಾರ್ಗದರ್ಶಿಯಾಗಿದೆ. ವಿರೋಧ ಪಕ್ಷದಲ್ಲಿರುವವರನ್ನು ಸ್ನೇಹಿತರಂತೆ ಕಾಣುವ ಅವರ ದೃಷ್ಟಿ ಅವರಲ್ಲಿಯ ಹೃದಯ ವೈಶಾಲತೆಯನ್ನು ಸಂಕೇತಿಸುತ್ತದೆ ಎಂದರು. ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಚೋರನೂರು ಕೊಟ್ರಪ್ಪ, ಶ್ರೀ ಎಸ್.ಕೆ.ಮೋದಿ ಶಾಲೆಯ ಅಧ್ಯಕ್ಷರಾದ ಶ್ರೀ ಏಚರೆಡ್ಡಿ ಸತೀಶ್, ಶ್ರೀ ಜಾನೆಕುಂಟೆ ಬಸವರಾಜ, ಶ್ರೀ ಹಲಕುಂದಿ ಸತೀಶ್ ಕುಮಾರ್ ಮತ್ತು ಶ್ರೀ ಹೆಚ್.ಎನ್.ಕೊಟ್ರೆಶ್ ಅವರು ವೈ ಮಹಾಬಲೇಶ್ವರಪ್ಪನವರ ಪುತ್ಥಳಿಗೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಸಹಪ್ರಾಧ್ಯಾಪಕರಾದ ಶ್ರೀ ಎಂ ಬೋಜರಾಜ, ಡಾ.ಕೆ.ಸಿ.ಸಜ್ಜನ್ ಮತ್ತು ಶ್ರೀ ಪಿ ಸುರೇಶ್ ಉಪಸ್ಥಿತರಿದ್ದರು.